Select Page

ಮಾನಸಿಕ ಕಾಯಿಲೆ ಇರುವವರು ಮದುವೆಯಾಗಬಹುದೇ ಇದು ಹಲವಾರು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಅವರ ಮನೆಯವರ ಮನಸ್ಸಿಗೆ ಬರುವ ಪ್ರಶ್ನೆ ?ಮಾನಸಿಕ ಕಾಯಿಲೆ ಇರುವವರಿಗೆ ಮದುವೆಯಾಗಬೇಕೋ ಬೇಡವೋ ಎಂಬ ಸಲಹೆಯನ್ನು ಹೇಗೆ ನೀಡುವುದು ಇದು ಮನೋವೈದ್ಯರ ತಲ್ಲಣ ಕೂಡ ..
ಇತ್ತೀಚೆಗೆ ಎಂಜಿನಿಯರಿಂಗ್ ಶಿಕ್ಷಣ ಪಡೆದ ಒಬ್ಬ ಹುಡುಗ ನನ್ನಲ್ಲಿ ಬಂದು ಇದೇ ಒಂದು ವಿಷಯದ ಬಗ್ಗೆ ತನ್ನ ದ್ವಂದ್ವಗಳನ್ನು ತೋಡಿಕೊಂಡ ..ಆತನು ತನ್ನದೇ ಊರಿನ ಹುಡುಗಿಯೊಬ್ಬಳನ್ನು ಸಣ್ಣದರಿಂದ ಪ್ರೀತಿಸಿ ಮದುವೆಯಾಗಿದ್ದ .ಆಕೆ ಬೈಪೊಲಾರ್ ಡಿಸಾರ್ಡರ್ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳು ..ಈ ವಿಷಯವನ್ನು ಮದುವೆಯಾಗುವವರೆಗೆ ಆತನಿಗೆ ಹೇಳಿರಲಿಲ್ಲ ..ಮದುವೆಯಾದ ಗಳಿಂದ ಮೂರು ಬಾರಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಳು ..ಈತ ಅವಳನ್ನು ಹೆಂಡತಿಯಾಗಿ ಸ್ವೀಕರಿಸಿದ್ದರೂ ಅವಳ ಕಾಯಿಲೆಯನ್ನು ಸ್ವೀಕರಿಸಲು ಸಿದ್ಧನಿರಲಿಲ್ಲ ..ಅವಳ ವರ್ತನೆಗಳು ಈತನಿಗೆ ಬಹಳಷ್ಟು ಬೇಸರವನ್ನು ತರುತ್ತಿತ್ತು .ಇದರಿಂದ ಬೇಸತ್ತು ಆತ ಅವಳ ಕಾಯಿಲೆಯ ಬಗ್ಗೆ ಮನೋವೈದ್ಯರೊಬ್ಬರು ಹಳೆಯ ಚೀಟಿಗಳನ್ನು ಹಿಡಿದುಕೊಂಡು ನನ್ನಲ್ಲಿ ಬಂದಿದ್ದ .ರೋಗಿಯನ್ನು ನೋಡದೆ ರೋಗಿಯ ಬಗ್ಗೆ ಏನೂ ಹೇಳಲಾರೆ ,ರೋಗಿಯ ಕಾಯಿಲೆಯ ಬಗ್ಗೆ ಕೂಡ ಏನೂ ಹೇಳಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದೆ .ಆದರೆ ಆತನು ಆಡಿದ ಮಾತುಗಳು ನನಗೆ ಯೋಚನೆ ಮಾಡಲು ಒಂದು ಆಹಾರವಾಯಿತು ..
ಮೊದಲು ಕಾನೂನು ಏನು ಹೇಳುತ್ತೆ ತಿಳಿದುಕೊಳ್ಳೋಣ ..LEGAL INSANITY ಎಂಬ ಒಂದು ಪದವಿದೆ ಇದರ ಪ್ರಕಾರ ತೀವ್ರ ಬಗೆಯ ಚಿತ್ತವಿಕಲತೆ, ಬೈಪೊಲಾರ್ ಡಿಸಾರ್ಡರ್ ,ಖಿನ್ನತೆ, ಅಪಸ್ಮಾರ ,ತೀವ್ರ ಬಗೆಯ ವ್ಯಕ್ತಿತ್ವ ದೋಷಗಳು ಇಂತಹುದು ಇದ್ದು ಮದುವೆಯಾಗಲು ಹೋದರೆ, ಅದನ್ನು ಮದುವೆಗೆ ಮುಂಚೆ ತಿಳಿಸದೇ ಇದ್ದರೆ NULLITY OF MARRIAGE ..ಕಾನೂನಿನಂತೆ ಮದುವೆಯೇ ಆಗಿಲ್ಲ ಅನ್ನುವ ದೃಷ್ಟಿಕೋನ ಕಾನೂನಿನಲ್ಲಿ ಇದೆ ..ಆದ್ದರಿಂದ ಯಾರೇ ಆಗಲಿ ಮನೋವೈದ್ಯರ ಹತ್ತಿರ ಮದ್ದು ತೆಗೆದುಕೊಳ್ಳುತ್ತಿದ್ದರೆ ಆ ಕಾಯಿಲೆಯ ಬಗ್ಗೆ ,ಮಾತ್ರೆಗಳ ಬಗ್ಗೆ ಮಾಹಿತಿ ಕೊಡುವುದು ಉಚಿತ .ಹಾಗೆ ಕೊಡದೆ ಮದುವೆಯಾದರೆ ಅದು ನಂಬಿಕೆ ದ್ರೋಹ .ತೀವ್ರ ಬಗೆಯ ಕಾಯಿಲೆಯಾಗಿದ್ದರೂ ಇದರಿಂದಾಗಿ ವಿವಾಹ ವಿಚ್ಛೇದನ ಆಗಲು ಒಂದು ದಾರಿ .
ಇನ್ನು ವೈದ್ಯಕೀಯವಾಗಿ ಬರೋಣ ..ವೈದ್ಯಕೀಯವಾಗಿ ನೋಡಿದರೆ ಮಾನಸಿಕ ಕಾಯಿಲೆಗಳ ಮಾತ್ರೆಗಳು ಏನಾದರೂ ದೀರ್ಘಕಾಲೀನವಾಗಿ ತೆಗೆದುಕೊಳ್ಳುತ್ತಿದ್ದಾರೆ ಅಥವಾ ಅಪಸ್ಮಾರ ಕಾಯಿಲೆಯ ಮಾತ್ರೆಗಳು ತೆಗೆದುಕೊಳ್ಳುತ್ತಿದ್ದರೆ ಈ ಮಾತ್ರೆಗಳಿಂದ ಉಂಟಾಗುವ ಪರಿಣಾಮಗಳು ಅಡ್ಡ ಪರಿಣಾಮಗಳು ವೈವಾಹಿಕ ಜೀವನದಲ್ಲಿ ಕೆಲವು ತೊಡಕುಗಳನ್ನು ಉಂಟು ಮಾಡಬಹುದು ..ಕೆಲವು ಮಾತ್ರೆಗಳು ಊಟಮಾಡುವ ಅಡ್ಡ ಪರಿಣಾಮಗಳೆಂದರೆ ಲೈಂಗಿಕ ನಿರಾಸಕ್ತಿ ,ಲೈಂಗಿಕ ಉದ್ರೇಕತೆ ಕಡಿಮೆ ಮಾಡುವುದು ,ಆಲಸ್ಯ ,ಕೆಲಸದಲ್ಲಿ ನಿರಾಸಕ್ತಿ ಜನಸಾಮಾನ್ಯರೊಡನೆ ಬೆರೆಯಲು ನಿರಾಸಕ್ತಿ ಮುಂತಾದವುಗಳು ಈ ಕಾರಣದಿಂದ ಗಂಡ ಹೆಂಡಿರ ನಡುವೆ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗುತ್ತವೆ ..ಇನ್ನು ಕೆಲವೊಮ್ಮೆ ಈ ದೀರ್ಘಕಾಲಿನ ಕಾಯಿಲೆ ಇರುವವರು ಮಾತ್ರೆಗಳು ಬಿಟ್ಟಾಗ ಅತಿಕ್ರಮಣಾಕಾರಿಯಾಗಿ ವರ್ತಿಸುವುದು ಮನೆಯಲ್ಲಿರುವವರಿಗೆ ಹೊಡೆಯುವುದು ಬಡಿಯುವುದು ಮುಂತಾದವುಗಳನ್ನು ಮಾಡಬಹುದು ..ಈ ದೀರ್ಘ ಕಾಲೀನ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಬೊಜ್ಜು ಬೆಳೆಯುವುದು ಸಕ್ಕರೆ ಕಾಯಿಲೆ ಬರುವುದು ಇದರಿಂದ ಕೂಡ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀಳಬಹುದು ..
ಹೀಗೆ ಕಾನೂನಿನ ಪ್ರಕಾರ ಮತ್ತು ವೈದ್ಯಕೀಯವಾಗಿ ನೋಡಿದರೆ ಮಾನಸಿಕ ಕಾಯಿಲೆಯಿಂದ ಬಳಲುತ್ತ ಇರುವವರು ತಮ್ಮ ಕಾಯಿಲೆಯ ಬಗ್ಗೆ ತಮ್ಮ ಮಾತ್ರೆಗಳ ಬಗ್ಗೆ ಮದುವೆಯಾಗುವ ಹುಡುಗ ಅಥವಾ ಹುಡುಗಿ ಯೊಂದಿಗೆ ಮುಕ್ತವಾಗಿ ಏನೂ ಬಚ್ಚಿಡದೆ ಮಾತನಾಡಿ ಮದುವೆಯಾಗುವುದು ಒಳ್ಳೆಯದು ..
ಮದುವೆಯಾಗಿ ಬದುಕುವುದೇ ಒಂದು ಜೀವನ ಅಲ್ಲ ಇದನ್ನು ನೆನಪಿಡಿ ..ಅದರಲ್ಲಿಯೂ ಸುಳ್ಳು ಹೇಳಿ ಮದುವೆಯಾಗಿ ಅಥವಾ ಕೆಲವೊಮ್ಮೆ ಮೂಢನಂಬಿಕೆಗಳಿಂದ ಮದುವೆಯಾಗಿ ಬೇರೆಯವರ ಜೀವನವನ್ನು ದಯವಿಟ್ಟು ಹಾಳುಮಾಡಬೇಡಿ ..”ಮದುವೆಯಾಗದೆ ಹುಚ್ಚು ಬಿಡಲ್ಲ ಹುಚ್ಚು ಬಿಡದೆ ಮದುವೆಯಾಗಲ್ಲ ..”ಇದು ಶುದ್ಧ ಸುಳ್ಳು ಮದುವೆ ಯಾವುದೇ ಕಾಯಿಲೆಗೆ ಚಿಕಿತ್ಸೆ ಅಲ್ಲ ..ಮದುವೆಯಾಗದೆ ಆತ್ಮಹತ್ಯೆ ಮಾಡಿಕೊಂಡರೆ ಆತ ಬ್ರಹ್ಮ ರಾಕ್ಷಸನಾಗಿ ಹುಟ್ಟುತ್ತಾನೆ ಎಂದು ಹೇಳಿ ಪದೇಪದೆ ಆತ್ಮಹತ್ಯೆ ಗೆ ಪ್ರಯತ್ನಿಸುತ್ತಿದ್ದ ಒಬ್ಬ ರೋಗಿಗೆ ಮದುವೆ ಮಾಡಿದರು ..ಮದುವೆಯಾದ ಈತ ಮದುವೆಯಾಗಿ ಐದು ದಿನದಲ್ಲಿ ಆತ್ಮಹತ್ಯೆ ಮಾಡಿಕೊಂಡ ..ಆತ ಬ್ರಹ್ಮರಾಕ್ಷಸ ಅದನ್ನು ಇಲ್ಲವೋ ಆ ಹೆಂಗಸಿನ ಪಾಲಿಗೆ ಆತ ಒಬ್ಬ ರಾಕ್ಷಸನಾದ …ನಿಜವಾಗಿ ನೋವಿನಿಂದ ಈ ಘಟನೆ ಬರೆಯುತ್ತಿದ್ದೇನೆ ..ದಯವಿಟ್ಟು ಇಂತಹ ಮೂಢನಂಬಿಕೆಗಳಿಗೆ ಬಲಿಯಾಗದಿರಿ ..
ಡಾ.ಪಿವಿ ಭಂಡಾರಿ ಮನೋವೈದ್ಯರು ,ಎವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ