- ಡಾ. ಬಿಧಾನ್ ಚಂದ್ರ ರಾಯ್: ಅಪ್ರತಿಮ ವೈದ್ಯ, ಆಧುನಿಕ ಬಂಗಾಳದ ಶಿಲ್ಪಿ ಮತ್ತು ರಾಷ್ಟ್ರೀಯ ಪ್ರೇರಣಾಸ್ಪದ ವ್ಯಕ್ತಿತ್ವ ಭಾರತ ದೇಶದಲ್ಲಿ ಪ್ರತಿ ಜುಲೈ 1 ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನಾಗಿ ನಾವು ಆಚರಿಸುತ್ತೇವೆ. ಇದಕ್ಕೆ ಕಾರಣ ಡಾ ಬಿ ಸಿ ರಾಯ್ ಅವರ ಜನ್ಮದಿನೋತ್ಸವ. ಆದರೆ ಅವರನ್ನೇ ಯಾಕೆ ನಾವು ಆಯ್ಕೆ ಮಾಡಿದ್ದೇವೆ ಮತ್ತು ಅವರ ಹುಟ್ಟುಹಬ್ಬದ ದಿನವೇ ರಾಷ್ಟ್ರೀಯ ವೈದ್ಯರ ದಿನಾಚರಣೆ ಯಾಕೆ ಆಚರಿಸುತ್ತೇವೆ ಎಂಬ ವಿಷಯ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಆದ್ದರಿಂದಲೇ ಡಾ. ಬಿ ಸಿ ರಾಯ್ ಅವರ ಬಗ್ಗೆ ಬರೆದಿದ್ದೇನೆ. ಡಾ. ಬಿಧಾನ್ ಚಂದ್ರ ರಾಯ್ (1 ಜುಲೈ 1882 – 1 ಜುಲೈ 1962) ಭಾರತೀಯ ಇತಿಹಾಸದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ವೈದ್ಯಕೀಯ, ಸಾರ್ವಜನಿಕ ಆರೋಗ್ಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಅವರ ಅಸಾಧಾರಣ ಕೊಡುಗೆಗಳಿಗಾಗಿ
ಅವರು ಹೆಸರಾಗಿದ್ದಾರೆ. ಅವರ ಜೀವನ ಮತ್ತು ಪರಂಪರೆಗಳನ್ನು ಸ್ಮರಿಸುವುದು ಭಾರತದ ಸಾರ್ವಜನಿಕ ಆರೋಗ್ಯ ಮತ್ತು ಅಭಿವೃದ್ಧಿಯ ಸವಾಲುಗಳನ್ನು ಎದುರಿಸುವಾಗ ಸದಾ ಅಗತ್ಯವಾಗಿ ಉಳಿದಿವೆ.
ಪ್ರಾರಂಭಿಕ ಜೀವನ ಮತ್ತು ಶಿಕ್ಷಣ
ಬ್ರಿಟಿಷ್ ರಾಜ್ ಕಾಲದಲ್ಲಿ ಪಟ್ನಾದ ಬಂಕಿಪುರ ದಲ್ಲಿ ಜನಿಸಿದ ಡಾ. ರಾಯ್, ಸಮಾಜ ಸೇವೆ ಮತ್ತು ಶಿಕ್ಷಣಕ್ಕೆ ಬದ್ಧವಾಗಿದ್ದ ಕುಟುಂಬದಲ್ಲಿ ಬೆಳೆದರು. ಅವರ ತಾಯಿ ಸಮಾಜ ಸೇವಕಿ ಮತ್ತು ತಂದೆ ಅಬಕಾರಿ ಇನ್ಸ್ಪೆಕ್ಟರ್ ಆಗಿದ್ದರು. ಅವರು ದಯೆ, ಶಿಸ್ತು ಮತ್ತು ಸಾರ್ವಜನಿಕ ಕರ್ತವ್ಯಗಳ ಮೌಲ್ಯಗಳನ್ನು ಮಕ್ಕಳಿಗೆ ಬೋಧಿಸಿದರು. ಪಟ್ನಾ ಕಾಲೇಜಿನಲ್ಲಿ ಗಣಿತದಲ್ಲಿ ಉತ್ತೀರ್ಣರಾದ ನಂತರ, ಡಾ. ರಾಯ್ ವೈದ್ಯಕೀಯ ಕ್ಷೇತ್ರವನ್ನು ಆರಿಸಿಕೊಂಡರು. ಆರ್ಥಿಕ ಸಂಕಷ್ಟಗಳನ್ನು ವಿದ್ಯಾರ್ಥಿವೇತನ ಮತ್ತು ತಮ್ಮ ದೃಢ ಸಂಕಲ್ಪದಿಂದ ಜಯಿಸಿದರು. ಅವರ ದೃಢ ನಿಶ್ಚಯವು ಅವರನ್ನು ಲಂಡನ್ನ ಸೆಂಟ್ ಬಾರ್ಥೊಲೊಮ್ಯೂಸ್ ಆಸ್ಪತ್ರೆಗೆ ಕರೆದೊಯ್ದಿತು. ಅಲ್ಲಿ ಅವರು ಕೇವಲ ಎರಡು ವರ್ಷಗಳಲ್ಲಿ MRCP ಮತ್ತು FRCS ಪದವಿಗಳನ್ನು ಪಡೆದ ಮೊದಲ ಭಾರತೀಯರಾದರು—ಅದು ಆ ಕಾಲದಲ್ಲಿ ಅತ್ಯಂತ ವಿಶಿಷ್ಟ ಸಾಧನೆಯಾಗಿತ್ತು. 1911ರಲ್ಲಿ ಭಾರತಕ್ಕೆ ಹಿಂತಿರುಗಿದ ಅವರು ಶೀಘ್ರದಲ್ಲೇ ದೇಶದ ಅತ್ಯಂತ ಗೌರವಾನ್ವಿತ ವೈದ್ಯರಲ್ಲಿ ಒಬ್ಬರಾಗಿದರು.
ವೈದ್ಯಕೀಯ ಸಾಧನೆಗಳು ಮತ್ತು ಅವರು ಸಂಸ್ಥಾಪಿಸಿದ ಸಂಸ್ಥೆಗಳು
ಡಾ. ರಾಯ್ ವೃತ್ತಿಜೀವನದಲ್ಲಿ ತಮ್ಮ ಶ್ರೇಷ್ಠ ವೈದ್ಯಕೀಯ ಕೌಶಲ್ಯಗಳ ಮೂಲಕ ಹೆಸರುವಾಸಿಯಾದರು.ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಗಳ ನಿರ್ಮಾಣದ ಮೇಲಿನ ಬದ್ಧತೆ ಅವರನ್ನು ದೊಡ್ಡ ವೈದ್ಯರ ಸಮೂಹದ ನಾಯಕನಾಗಿ ಬೆಳೆಸಿತು. ಅವರು ಸ್ಥಾಪನೆಗೆ ಕಾರಣವಾದ ಪ್ರಮುಖ ವೈದ್ಯಕೀಯ ಸಂಸ್ಥೆಗಳು: - ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ (ಈಗ ಚಿತ್ತರಣ್ಜನ್ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್)
- ಚಿತ್ತರಂಜನ್ ಸೇವಾ ಸದನ್ ಆಸ್ಪತ್ರೆ (ಮಹಿಳೆ ಮತ್ತು ಮಕ್ಕಳಿಗಾಗಿ)
- ಜಾದವ್ಪುರ ಟಿಬಿ ಆಸ್ಪತ್ರೆ
- ಕಮಲಾ ನೆಹರು ಮೆಮೋರಿಯಲ್ ಆಸ್ಪತ್ರೆ
- ಕೋಲ್ಕತ್ತಾದ ಮೊದಲ ಸ್ನಾತಕೋತ್ತರ ವೈದ್ಯಕೀಯ ಕಾಲೇಜು ಅವರು ವೈದ್ಯಕೀಯ ಶಿಕ್ಷಣದ ಮಾನದಂಡಗಳನ್ನು ರೂಪಿಸುವ ಮತ್ತು ನೈತಿಕತೆಯ ಮಾನದಂಡಗಳನ್ನು ಭಾರತದಲ್ಲಿ ಸ್ಥಾಪಿಸಿದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (MCI) ಇದರ ಸ್ಥಾಪನೆಗೆ ಕಾರಣಿಕರ್ತರಾದರು.MCIಯ ಮೊದಲ ಅಧ್ಯಕ್ಷರಾಗಿದ್ದರು. ಹಾಗೆಯೇ ನಮ್ಮೆಲ್ಲರ ಐಸೋಸಿಯೇಷನ್ ಇಂಡಿಯನ್ ಮೆಡಿಕಲ್ಅ ಸೋಸಿಯೇಷನ್ (IMA) ಸ್ಥಾಪನೆಗೆ ಪ್ರಮುಖ ಪಾತ್ರವಹಿಸಿದರು.
ರಾಜಕೀಯ ಜೀವನ ಮತ್ತು ರಾಜ್ಯಕಾರ್ಯಗಳು
ಮಹಾತ್ಮಾ ಗಾಂಧೀಜಿಯವರ ಪ್ರೇರಣೆಯಿಂದ, ಡಾ. ರಾಯ್ 1920ರ ದಶಕದಲ್ಲಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು. ಅವರು ಕೋಲ್ಕತ್ತಾ ಮಹಾನಗರ ಪಾಲಿಕೆಯ ಮೇಯರ್, ಕೋಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಮುಖ್ಯವಾಗಿ ಪಶ್ಚಿಮ
ಬಂಗಾಳದ ಎರಡನೇ ಮುಖ್ಯಮಂತ್ರಿ (1948-1962) ಆಗಿ ಸೇವೆ ಸಲ್ಲಿಸಿದರು. ಅವರ ಮುಖ್ಯಮಂತ್ರಿತ್ವದ ಪ್ರಮುಖ ಸಾಧನೆಗಳು:
ಪುನರ್ವಸತಿ: ಭಾರತ ಪಾಕಿಸ್ತಾನ ವಿಭಜನೆಯಿಂದ ಆಸ್ತವ್ಯಸ್ತಗೊಂಡಿದ್ದ ಲಕ್ಷಾಂತರ ಜನರ ಪುನರ್ವಸತಿಗೆ ಸಹಾಯ ಮಾಡಿದರು.
ಉದ್ಯಮೀಕರಣ: ದುರ್ಗಾಪುರ ಉಕ್ಕಿನ ಕಾರ್ಖಾನೆ ಮತ್ತು ಕಲ್ಯಾಣಿ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸಿದರು. ನಗರ ಯೋಜನೆ: ಸಾಲ್ಟ್ ಲೇಕ್ (ಬಿಧಾನ್ನಗರ), ಕಲ್ಯಾಣಿ, ದುರ್ಗಾಪುರ, ಅಶೋಕನಗರ, ಹಬ್ರಾ ಮುಂತಾದ ಯೋಜಿತ ನಗರಗಳ ನಿರ್ಮಾಣದ ಶಿಲ್ಪಿಯಾಗಿದ್ದರು. ಶಿಕ್ಷಣ: ಭಾರತದ ಮೊದಲ ಐಐಟಿ—ಐಐಟಿ ಕರಗ್ಪುರ್ ಹಾಗೆಯೇ ಜಾದವ್ಪುರ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದರು. ಆರೋಗ್ಯ: ನಗರ ಮತ್ತು ಗ್ರಾಮೀಣ ಬಂಗಾಳದಲ್ಲಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಆರೋಗ್ಯ ಸೇವೆಯ ಮಟ್ಟವನ್ನು ಹೆಚ್ಚಿಸಿದರು.
ಉನ್ನತ ಹುದ್ದೆಯಲ್ಲಿದ್ದರೂ ಸಹ, ಡಾ. ರಾಯ್ ಅವರು ತಮ್ಮ ವೈದ್ಯಕೀಯ ಸೇವೆಯನ್ನು ಮುಂದುವರೆಸಿದರು. ದಿನದಲ್ಲಿ ಒಂದೆರಡು ಗಂಟೆ ರೋಗಿಗಳಿಗೆ ಉಚಿತ ವೈದ್ಯಕೀಯ ಸಲಹೆಯನ್ನು ಮುಖ್ಯಮಂತ್ರಿಗಳಾಗಿ ಕೂಡ ಮುಂದುವರಿಸಿದರು. ವೈಯಕ್ತಿಕ ಆಸಕ್ತಿಗಳು ಮತ್ತು ಸಂಬಂಧಗಳು ಡಾ. ರಾಯ್ ಅವರು ವಿವಾಹವಾಗದೆ, ತಮ್ಮ ಜೀವನವನ್ನು ಸಂಪೂರ್ಣವಾಗಿ ಜನರ ಸೇವೆಗೆ ಅರ್ಪಿಸಿದರು. ಅವರು ಮಹಾತ್ಮಾ ಗಾಂಧೀಜಿಯ ಆಪ್ತ ವೈದ್ಯರಾಗಿದ್ದರು ಮತ್ತು ಜವಾಹರಲಾಲ್ ನೆಹರೂಜಿಯವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.
ಸಾಹಿತ್ಯ, ಸಂಗೀತ (ವಿಶೇಷವಾಗಿ ರವೀಂದ್ರ ಸಂಗೀತ), ತೋಟಗಾರಿಕೆ ಮತ್ತು ವಾಸ್ತುಶಿಲ್ಪದಲ್ಲಿ ಆಸಕ್ತಿ ಹೊಂದಿದ್ದರು. ಪ್ರಶಸ್ತಿ, ಗೌರವಗಳು ಮತ್ತು ಶಾಶ್ವತ ಪ್ರಭಾವ ಡಾ. ರಾಯ್ ಅವರಿಗೆ 1961ರಲ್ಲಿ ಭಾರತ ರತ್ನ (ಮರಣೋತ್ತರ)ಮತ್ತು 1955ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರಕಿತು. ಅವರು ಲಂಡನ್ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಮತ್ತು ಅಮೆರಿಕನ್ ಕಾಲೇಜ್ ಆಫ್ ಚೆಸ್ಟ್ ಫಿಸಿಷಿಯನ್ಸ್ನ ಫೆಲೋ
ಆಗಿದ್ದರು. ಅವರ ಜನ್ಮದಿನವಾದ ಜುಲೈ 1ರಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. 1962ರ ಜುಲೈ 1ರಂದು (ಅವರ 80ನೇ ಹುಟ್ಟುಹಬ್ಬದಂದು) ಅವರು ನಿಧನರಾದರು. ಅವರು ನಿಧನರಾದ ನಂತರ ಅವರ ಇಚ್ಛೆಯಂತೆ ಅವರ ಮನೆ ಅವರ ತಾಯಿಯ ಹೆಸರಿನಲ್ಲಿ ನರ್ಸಿಂಗ್ ಹೋಮ್ ಆಗಿ ಪರಿವರ್ತಿಸಲಾಯಿತು. ಪಟ್ನಾದಲ್ಲಿ ಸಮಾಜ ಸೇವೆಗೆ ಟ್ರಸ್ಟ್ ಸ್ಥಾಪಿಸಲಾಯಿತು. 1976ರಲ್ಲಿ ಸ್ಥಾಪಿತವಾದ ಡಾ. ಬಿ.ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ವೈದ್ಯಕೀಯ, ವಿಜ್ಞಾನ, ತತ್ವಶಾಸ್ತ್ರ, ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಶ್ರೇಷ್ಠತೆಗೆ ಗೌರವ ನೀಡುತ್ತದೆ. ಡಾ. ಬಿಧಾನ್ ಚಂದ್ರ ರಾಯ್ ಅವರ ಜೀವನವು ದೂರ ದೃಷ್ಟಿ, ಸಮರ್ಪಣ ಮನೋಭಾವ ಮತ್ತು ಸಾರ್ವಜನಿಕ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದರೆ ಮನುಷ್ಯ ಏನಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ವೈದ್ಯಕೀಯ, ಶಿಕ್ಷಣ ಮತ್ತು ಆಡಳಿತವನ್ನು ಒಟ್ಟಿಗೆ ನಡಿಸುವ ಅವರ ಸಮಗ್ರ ದೃಷ್ಟಿಕೋಣವು ಆಧುನಿಕ ಭಾರತದ ರೂಪುರೇಷೆಯನ್ನು ರೂಪಿಸಿದೆ. ಪ್ರತಿವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುವಾಗ, ಅವರ ಸೇವಾ, ದಯಾ ಮತ್ತು ವೈಜ್ಞಾನಿಕ ನೀತಿಯ ಆದರ್ಶಗಳು ಸದಾ ಪ್ರಸ್ತುತವಾಗಿವೆ.
ಹೀಗೆ ಭಾರತ ದೇಶದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಬಡ ಜನರಿಗೆ ಉತ್ತಮ ಸೇವೆಯನ್ನು ನೀಡುವುದಲ್ಲದೆ ವೈದ್ಯರುಗಳಿಗೆ ಉತ್ತಮ ಸಂಘಟನೆ ಒಂದನ್ನು ಹಾಗೂ ವೈದ್ಯರನ್ನು ನಿರ್ದೇಶಿಸುವ ವೈದ್ಯಕೀಯ ಮಂಡಳಿಯನ್ನು ಇವರು ರಚಿಸಿದರು. ಹಲವಾರು ವೈದ್ಯಕೀಯ ಕಾಲೇಜು ಮತ್ತು ಸಂಸ್ಥೆಗಳನ್ನು ಸ್ಥಾಪಿಸಿದರು. ರಾಜಕಾರಣಿಯಾದರೂ ವೈದ್ಯಕೀಯ ಸೇವೆಯನ್ನು ಮರೆಯಲಿಲ್ಲ. ಇಂತಹ ವ್ಯಕ್ತಿಯಲ್ಲದೆ ಇನ್ನಾರ ಹೆಸರಿನಲ್ಲಿ ನಾವು ವೈದ್ಯರ ದಿನಾಚರಣೆಯನ್ನು ಆಚರಿಸುವುದು?








